Wednesday, March 7, 2018

ನಿಮಗೆ ಜಗಳವಾಡಲು ಬರುತ್ತಾ?

     ಇದೊಂದು ವಿಷಯದಲ್ಲಿ ನಾನು ತುಂಬಾ ಸೋತಿದ್ದೇನೆ ನನಗೆ ಜಗಳವಾಡಲು ಬರುವುದಿಲ್ಲ. ಯಾರೋ ಏನೋ ಅಂದರು ಎಂದು ಅವರ ವಿರುದ್ಧ ದ್ವೇಷಕಾರುತ್ತಾ ಕೂರುವುದಿಲ್ಲ, ಮಾತಿನಲ್ಲೇ ಬಗೆಹರಿಸಿಕೊಳ್ಳುವುದಾದರೆ ಜಗಳವೇಕೆ ಎಂಬುದು ನನ್ನ ಸಿದ್ದಾಂತ, ನನ್ನ ಟೀಕಿಸುವುದರಿಂದ, ನನ್ನ ಬೈಯ್ಯುವುದರಿಂದ ಅವರಿಗೆ ಸ್ವಲ್ಪ ಖುಷಿ ಸಿಗುವುದಾದರೆ 'ಸಿಗಲಿ ಪಾಪ, ಅವರು ಖುಷಿಯಾಗಿದ್ದು ಎಷ್ಟು ದಿನವಾಯಿತೋ ಏನೋ' ಅನ್ನುವಷ್ಟು ಮಟ್ಟಿಗೆ ನಾನು ಜಗಳದ ವಿರೋಧಿ. ಹಾಗಂತ ನಾನು ಇದುವರೆಗೂ ಜಗಳವಾಡಿಯೇ ಇಲ್ಲವೆಂದಲ್ಲ ಕೊನೆಯದಾಗಿ ಜಗಳವಾಡಿದ್ದು ನನಗೆ ನೆನಪಿಲ್ಲ !! 

ಮನುಷ್ಯನ ಆಯಸ್ಸು ಇರುವುದೇ 70-80 ವರ್ಷಗಳು (ಅದೂ ಕೂಡ ಗ್ಯಾರಂಟಿ ಇಲ್ಲ ) ಜಗತ್ತಿನಲ್ಲಿ ನಾವು ನೋಡದೇ ಇರುವ ಅತ್ಯಂತ ಸುಂದರವಾದ ಸ್ಥಳಗಳು, ಒಮ್ಮೆಯೂ ಬೇಟಿಯಾಗದ ಅದ್ಬುತ ವ್ಯಕ್ತಿಗಳು,,, ಅಬ್ಬಾ!! ಇನ್ನೂ ಹತ್ತು ಜನ್ಮವೆತ್ತಿ ಬಂದರೂ ಓದಿ ಮುಗಿಸದಷ್ಟು ಪುಸ್ತಕಗಳಿವೆ ಇದನ್ನೆಲ್ಲ ನಿಮಗೆ ಉಳಿದಿರುವ ಆಯಸ್ಸಿನಲ್ಲಿ ಪೂರ್ಣಗೊಳಿಸಲು ಸಾಧ್ಯವಾ? ಖಂಡಿತಾ ಇಲ್ಲ, ! ಹಾಗಾದರೆ ಮತ್ತೇಕೆ ಜಗಳಮಾಡುವಿರಿ ? 'ಹಂದಿಯ ಜೊತೆ ಜಗಳವಾಡಿದರೆ ಅದು ನಮ್ಮನ್ನು ಕೆಸರಿನಲ್ಲಿ ಎಳೆದುಕೊಂಡುಹೋಗಿ ತಾನು ಖುಷಿಪಟ್ಟು ನಮ್ಮನ್ನು ಮೂರ್ಖರನ್ನಾಗಿಸುತ್ತೆ'.!


ತಪ್ಪೇನಿಲ್ಲ ಕೋಪಿಸಿಕೊಳ್ಳುವುದು  ಆದರೆ  'ಕೊಚ್ಚೆಗೆ ಕಲ್ಲೆಸದರೆ ನಮಗೆತಾನೇ ಸಿಡಿಯುವುದು?' ಈ ಒಂದು ಕಾರಣಕ್ಕೆ ಅನೇಕ ಜಗಳಗಳು ನಮ್ಮ ಕೆಂಪು ಕಂಗಳ ಕೋಪಾಗ್ನಿ ಜ್ವಾಲೆಯಲ್ಲೇ ತಣ್ಣಗಾಗಿವೆ, ಸಂಸ್ಕಾರವಂತರಿಗೆ ಇನ್ ಬಿಲ್ಟ್ ಜಗಳ ತಡೆಯುವ ಶಕ್ತಿ ಇರುತ್ತದೆ, ಅವರು ಕೋಪಮಾಡಿಕೊಂಡು ಎದ್ದು ಜಾಗ ಖಾಲಿ ಮಾಡುತ್ತಾರೆ, ತೊಡೆ ತಟ್ಟಿ ರಸ್ತೆಗಿಳಿದು ಬಾಯಿಗೆ ಬಂದಂತೆ ಮಾತಾಡುವುದಿಲ್ಲ. ಇಂತವರ ಜಗಳ ಬಿಡಿಸುವುದು ತುಂಬಾ ಸುಲಭ ' ಅವನಿಗಂತೂ ಬುದ್ದಿಯಿಲ್ಲ ನೀವೂ ಹಾಗೇ ಮಾಡೋದು ಸರೀನಾ?' ಇದೊಂದು ಮಾತೂ ಸಹ ಎಷ್ಟೋ ಜಗಳಗಳನ್ನು ತಡೆದಿದೆ. 

ತುಂಬಾ ಜನರು ನಾವು ಜಗಳವಾಡದೇ ಇರುವುದನ್ನು ವೀಕ್ ನೆಸ್ ಎಂದು ಭಾವಿಸಿರುತ್ತಾರೆ ಹಾಗೆ ನೋಡಿದರೆ ಜಗಳವಾಡುವುದು ತುಂಬಾ ಸುಲಭ ಜಗಳವಾಡದೇ ಅವಡುಗಚ್ಚಿ ಸುಮ್ಮನಿರುವುದು ತುಂಬಾ ಕಷ್ಟ. 'ಯಾವನೋ ಕೆಲಸಕ್ಕೆ ಬಾರದ ಮಾತನ್ನಾಡಿದ ಎಂದು ಸುಮ್ಮನಿರುವುದು ಬುದ್ದಿವಂತರ ಲಕ್ಷಣ.'

ಒಮ್ಮೆ ಯೋಚನೆ ಮಾಡಿ ನಾವು ಎಂಥಹ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ, ಬದುಕು ಸುಂದರವಾಗಿದೆ. ಯಾರೋ ನಮ್ಮ ಸಮಯದ ಹತ್ತು ನಿಮಿಷ ಹಾಳುಮಾಡಿದರೆಂದು ಕೊರಗುವ ನಾವು ಯಾರೊಂದಿಗೋ ಜಗಳಕ್ಕಿಳಿದು ವೃಥಾ ಸಮಯ ಹಾಳುಮಾಡಿಕೊಳ್ಳುತ್ತಿದ್ದೇವೆ.
ಇವೆಲ್ಲವುಗಳ ಮಧ್ಯೆ ನಮ್ಮ ಮಾನಸಿಕ ನೆಮ್ಮದಿಯನ್ನೂ ಹಾಳು ಮಾಡಿಕೊಳ್ಳುತ್ತೇವೆ. ದ್ವೇಷದ ಮೊಟ್ಟೆಗೆ ಕಾವು ಕೊಡುತ್ತೇವೆ. ದ್ವೇಷ ಯಾವತ್ತೂ ನಮ್ಮನ್ನೇ ಸುಡುತ್ತದೆ. ಅದಕ್ಕೆ ಸಮಯ ವ್ಯಯಿಸಲೇಬಾರದು. ನಮ್ಮ ಮೇಲೆ ಕಲ್ಲೆಸೆದವರಿಗೆ ತಿರುಗಿ ನಾವು ಕಲ್ಲೆಸೆದು ಮೈ ಕೈ ನೋಯಿಸಿಕೊಳ್ಳುವ ಬದಲು, ಅವರ ಕಲ್ಲೆಸೆತದಿಂದ ತಪ್ಪಿಸಿಕೊಂಡು, ಆ ಕಲ್ಲಿನಿಂದಲೇ ಸೌಧ ನಿರ್ಮಿಸಿಕೊಳ್ಳುವುದು ಸಕಾರಾತ್ಮಕ ಮತ್ತು ಬುದ್ದಿವಂತಿಕೆಯ ನಡೆವಳಿಕೆ!

ಅಷ್ಟಕ್ಕೂ ಜೀವನ ಅಂದ್ರೆ ಈ ಜಗಳಗಳೇ ಅಲ್ಲವಲ್ಲ. ಅದು ಯಾರಿಗೆ ಖುಷಿ ಕೊಡುತ್ತದೋ, ಕೊಡಲಿ ಬಿಡಿ. ಅದರಲ್ಲಿ ಅವರು ಖುಷಿ ಕಾಣಲಿ, ತಲ್ಲೀನರಾಗಲಿ, ತಕರಾರಿಲ್ಲ. ಆದರೆ ಜೀವನ ಅದಕ್ಕಿಂತಲೂ ರೋಚಕವಾಗಿದೆ ಎಂಬುದನ್ನು ಈ ಜೀವನವೇ ತೋರಿಸಿಕೊಟ್ಟಿದೆ. ಈ ಜೀವನ ಪ್ರೀತಿಯೇ ನಮ್ಮನ್ನು ಪೊರೆಯುವುದು. ಈ ಜಗಳ, ಬಡಿದಾಟ, ಹಗೆತನ ನಮ್ಮನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ. ಕೊಂಡೊಯ್ಯುವುದಿದ್ದರೆ ಇನ್ನಷ್ಟು ಕೆಳಕ್ಕೇ ಹೊರತು ಮೇಲಕ್ಕಲ್ಲ.!

ನಿಮ್ಮವ:- ಒಂಟಿಪ್ರೇಮಿ

No comments: