Thursday, April 25, 2019

ನಕಾರಾತ್ಮಕ ವ್ಯಕ್ತಿಗಳು

ಮಾತೆತ್ತಿದರೆ ನಕಾರಾತ್ಮಕವಾಗಿ ಮಾತಾಡು ವುದು ಒಂದು ಕಾಯಿಲೆ. ಕೆಲವರಿಗೆ ಇದೊಂದು ವಾಸಿಪಡಿಸಲಾಗದ ಕಾಯಿಲೆ. ಅವರು ಪ್ರತಿಯೊಂದರಲ್ಲೂ ಹುಳುಕು ಹುಡುಕುತ್ತಾರೆ. ನೀವು ಚಂದ್ರನನ್ನು ತೋರಿಸಿ, ಅವರು ಚಂದ್ರನೊಳಗಿರುವ ಕಪ್ಪು ಕಲೆಯನ್ನು ಎತ್ತಿ ತೋರಿಸುತ್ತಾರೆ. ಗುಲಾಬಿ ಹೂವನ್ನು ತೋರಿಸಿ, ಅದರ ಮುಳ್ಳು ಚುಚ್ಚುತ್ತದೆ ಎಂದು ಹೇಳುತ್ತಾರೆ. ಜಿಲೇಬಿ ಬಹಳ ಚೆನ್ನಾಗಿದೆ ಅಂದ್ರೆ, ಅದಕ್ಕೆ ಬಣ್ಣ ಹಾಕಿದ್ದು ಹೆಚ್ಚಾಯಿತು ಅಂತಾರೆ. ಇಂಥವರು ಐಶ್ವರ್ಯ ರೈ ಅನ್ನು ನೋಡಿ, ಅವಳ ಮೂಗು ತುಸು ನೀಳವಾಗಿದಿದ್ದರೆ ಚೆನ್ನಾಗಿರುತ್ತಿದ್ದಳು ಎಂದು ಹೇಳಲು ಹಿಂದೇಟು ಹಾಕಲಾರರು.

ಇವರಿಗೆ ಯಾವುದರಲ್ಲೂ ಸಮಾಧಾನವಿಲ್ಲ. ಪ್ರತಿಯೊಂದರಲ್ಲೂ ದೋಷ ಹುಡುಕುತ್ತಾರೆ. ಕೊರಗು ಅವರ ಗುಣ. ಟೀಕೆ ಅಸ್ತ್ರ. ಅಪಸ್ವರವೇ ದನಿ. ನಕಾರಾತ್ಮಕತೆ ವ್ಯಕ್ತಿತ್ವ. ಇಂಥವರು ತಮಗೆ ಅಂಟಿದ ವ್ಯಾಧಿಯನ್ನು ಬೇರೆಯವರಿಗೂ ಅಂಟಿಸುತ್ತಾರೆ. ಎಂಥ ಸುಂದರ, ಹಿತಕರ ಪರಿಸರವನ್ನು ಬೇಕಾದರೂ ತಮ್ಮ ಒಂದು ಮಾತಿನಿಂದ ಹಾಳುಗೆಡವುತ್ತಾರೆ.

ಇಂಥವರು ಎಲ್ಲ ಆಫೀಸು, ಸಂಘಟನೆ, ಊರುಗಳಲ್ಲೂ  ಇರುತ್ತಾರೆ ಹಾಗೂ ತಮ್ಮ ಇರುವಿಕೆಯನ್ನು ಸದಾ ಪ್ರಕಟಪಡಿಸುತ್ತಲೇ ಇರುತ್ತಾರೆ. ಇಂಥವರು ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಎಲ್ಲವನ್ನು ಸಂದೇಹದಿಂದಲೇ ಗಮನಿಸುತ್ತಾರೆ. ಪ್ರತಿಯೊಂದರಲ್ಲೂ ಓರೆಕೋರೆಗಳನ್ನು ಹುಡುಕುತ್ತಾರೆ. ಹಾಗೆಂದು ಅಂಥ ಅವ್ಯವಸ್ಥೆ ಅಥವಾ ಓರೆಕೋರೆಗಳನ್ನು ತಾವೇ ಮುಂದಾಗಿ ಸರಿಪಡಿಸಲಾರರು. ಪರಿಹಾರ ಹುಡುಕಲಾರರು. ಅವರದ್ದೇನಿದ್ದರೂ ತಪ್ಪುಗಳನ್ನಷ್ಟೇ ಹುಡುಕುವುದು. ಉಳಿದ ಯಾವ ಕೆಲಸವೂ ಅವರಿಗೆ ಸಂಬಂಧವಿಲ್ಲ.

ಇಂಥವರು ತಾವಾಗಿ ಯಾವ ಕೆಲಸವನ್ನೂ ಮಾಡಲಾರರು. ಇತರರು ಮಾಡಿದ್ದನ್ನು ಟೀಕಿಸಬಲ್ಲರು. ಒಂದು ವ್ಯವಸ್ಥೆಯನ್ನು ಹೇಗೆ ಸರಿಪಡಿಸಬಹುದು ಎಂದು ಕೇಳಿದರೆ ಇವರಲ್ಲಿ ಉತ್ತರವಿರುವುದಿಲ್ಲ. ಆ ವ್ಯವಸ್ಥೆಯಲ್ಲಿ ಇರುವ ದೋಷಗಳೇನು ಎಂಬುದರ ಉದ್ದ ಪಟ್ಟಿ ಇವರಿಗೆ ಬಾಯಿ ಪಾಠದಷ್ಟು ಸುಲಲಿತ.

ಇದು ಕೇವಲ ಸ್ವಭಾವ ಅಲ್ಲ. ಇದೊಂದು ಮಾನಸಿಕ ರೋಗ. ಇಂಥವರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಇಂಥ ಗುಣ ಹೊಂದಿರುವವರು ಎಲ್ಲರ ತಿರಸ್ಕಾರಕ್ಕೆ ಪಾತ್ರರಾಗುತ್ತಾರೆ. ಎಲ್ಲರೂ ಇವರನ್ನು ದೂರವಿಡಲು ಪ್ರಯತ್ನಿಸುತ್ತಾರೆ. ಅದೆಷ್ಟೇ ಉತ್ತಮ ಆಫೀಸು, ಪರಿಸರವೇ ಇರಬಹುದು, ಅಲ್ಲಿ ಸಣ್ಣ ಪುಟ್ಟ ನ್ಯೂನತೆಗಳಿರುವುದು ಸಹಜ. ಅಂಥ ಹೊಳೆವ ಸೂರ್ಯನೂ ಗ್ರಹಣ ಕಾಲದಲ್ಲಿ ಮಂಕಾಗುತ್ತಾನೆ. ನ್ಯೂನತೆಗಳೇ ಪ್ರಮುಖ ವಾಗಬೇಕಿಲ್ಲ. ಅವನ್ನು ಸಹಿಸಿಕೊಳ್ಳುವ, ಒಪ್ಪಿಕೊಳ್ಳುವ ಹಾಗೂ ಸರಿಪಡಿಸುವ ಕಳಕಳಿ ನಮ್ಮದಾಗಬೇಕು. ಅಪಸ್ವರವನ್ನು ಎತ್ತಲೇಬೇಕಾದ ಪ್ರಸಂಗ ಅನಿವಾರ್ಯವಾದರೆ ನೀವು ಕೊನೆಯ ವರಾಗಿ ಹಾಗೂ ಅದು ಸರಿಪಡಿಸುವುದರಲ್ಲಿ ಮೊದಲನೆ ಯವರಾಗಿ.

ನ್ಯಾನೋ ಕಥೆ

"ನನ್ನ ಆಹ್ವಾನವನ್ನು ಮನ್ನಿಸಿ ಬಂದಿದ್ದಕ್ಕೆ ಧನ್ಯವಾದ. ನಾಳೆ ನನ್ನನ್ನು ನೇಣಿಗೇರಿಸುತ್ತಾರೆ. ಸಾಯುವ ಮುನ್ನ ನಿಮ್ಮ ಬಳಿ ಹೇಳುವ ವಿಷಯವೊಂದಿತ್ತು."
"ಕೇಳುತ್ತಿದ್ದೇನೆ" ಎಂಬಂತೆ ಅವನು ತಲೆಯಾಡಿಸಿದ.
"ನಿಮ್ಮ ಹೆಂಡತಿಯನ್ನು ನಾನು ಕೊಲೆ ಮಾಡಲಿಲ್ಲ. ಸಾಯಲಿರುವ ಮನುಷ್ಯ ಸುಳ್ಳಾಡಬೇಕಿಲ್ಲ. ಆದರೆ ನಿಮ್ಮ ದ್ವೇಷದ ಹೊರೆ ಹೊತ್ತು ಸಾಯುವುದು ನನಗೆ ಬೇಕಿಲ್ಲ. ಅದಕ್ಕೆ ನಿಮ್ಮನ್ನು ಕರೆಸಿದೆ. ನಿಜವಾಗಿಯೂ ನಾನು ನಿಮ್ಮ ಪತ್ನಿಯನ್ನು ಕೊಂದಿಲ್ಲ. ನನ್ನನ್ನು ನಂಬಿ."
ಕ್ರೌರ್ಯ ಮಡುಗಟ್ಟಿದ ಮುಖಭಾವದೊಡನೆ ಅವನೆಂದ, "ಅದು ನಿನಗಷ್ಟೇ ಅಲ್ಲ, ನನಗೂ ಗೊತ್ತು."
ಮಂದಸ್ಮಿತನಾಗಿ, ಬೆರಳಲ್ಲಿ ಕಾರಿನ ಕೀಲಿ ತಿರುವುತ್ತಾ ಗೋಡೆಯಾಚೆ ಕಾದಿದ್ದ ತನ್ನ ಪ್ರೇಯಸಿಯತ್ತ ಬಿರಬಿರನೆ ನಡೆದ.

ಒಂದು ಅತ್ಯಮೂಲ್ಯವಾದ ಪಾಠ

ಒಂದ್ ಪಾತ್ರೆಲಿ ನೀರು ಹಾಕಿ ಅದರಲ್ಲಿ ಒಂದು ಕಪ್ಪೆ ಬಿಟ್ಟು ಒಲೆ ಹಚ್ಚಿ ಬಿಸಿ ಮಾಡಿದರೆ ಏನಾಗುತ್ತೆ ಗೊತ್ತಾ? ಕಪ್ಪೆ ಬಿಸಿ ಆಗ್ತಿರೋ ನೀರಿಗೆ ಒಗ್ಗಿಕೊಳ್ತಾ ಬರುತ್ತೆ. ಆದರೆ ನೀರು ಇನ್ನೇನು ಕುದಿಯುವಷ್ಟು ಬಿಸಿ ಆದಾಗ ಅದಕ್ಕೆ ಇನ್ನು ತಡಿಯಕ್ಕಾಗಲ್ಲ. ಆಗ ಹೊರಗೆ ಹಾರಿ ಹೋಗಕ್ಕೆ ಪ್ರಯತ್ನ ಮಾಡುತ್ತೆ...ಆದ್ರೆ ಆಗ ಅದಕ್ಕೆ ಹಾರಕ್ಕಾಗಲ್ಲ... ಯಾಕಂದ್ರೆ ಅದರ ಶಕ್ತಿಯೆಲ್ಲ ಹೊರಟು ಹೋಗಿರುತ್ತೆ. ಆದ್ದರಿಂದ ಕಪ್ಪೆ ಸತ್ತುಹೋಗುತ್ತೆ.
ಈಗ ಪ್ರಶ್ನೆ - ಕಪ್ಪೆ ಯಾಕೆ ಸಾಯುತ್ತೆ? ಯೋಚನೆ ಮಾಡಿ!
ನಿಮ್ಮಲ್ಲೆ ಎಷ್ಟೋ ಜನ ಕುದಿಯೋ ನೀರೇ ಕಾರಣ ಅಂತ ಹೇಳ್ತೀರಿ ಅಂತ ಗೊತ್ತು, ಆದ್ರೆ ನಿಜವಾದ ಕಾರಣ ಅದಲ್ಲ. ಕಪ್ಪೆಗೆ ಯಾವಾಗ ಹೊರಗೆ ಹಾರಿ ಹೋಗಬೇಕು ಅನ್ನೋ ತೀರ್ಮಾನ ಸರಿಯಾಗಿ ಮಾಡದೆ ಇರೋದೇ ಅದರ ಸಾವಿಗೆ ಕಾರಣ.
ನಾವೂ ಅಷ್ಟೆ... ಸುಮಾರ್ ಸಲಿ ಜನರು ಏನ್ ಮಾಡ್ತಾ ಇದ್ದರೂ ನಾವು ಅಡ್ಜಸ್ಟ್ ಮಾಡ್ಕೊಂಡ್ ಹೋಗ್ತಾ ಇರ್ತೀವಿ. ಆದರೆ ಯಾವಾಗ ಈ ಅಡ್ಜಸ್ಟ್ ಅನ್ನೋದನ್ನ ನಿಲ್ಲಿಸಿ ‘ಹೊರಗೆ’ ಹೋಗಬೇಕು ಅನ್ನೋ ತೀರ್ಮಾನ ಸರಿಯಾಗಿ ಮಾಡಲ್ಲ.
ಜನರು ನಮ್ನ ದೈಹಿಕವಾಗಿ... ಮಾನಸಿಕವಾಗಿ... ಆರ್ಥಿಕವಾಗಿ... ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳಕ್ಕೆ ಬಿಟ್ಟರೆ... ಅವರು ಉಪಯೋಗಿಸಿಕೊಳ್ಳೋದನ್ನ ನಿಲ್ಲಿಸಲ್ಲ... ಮುಂದುವರೆಸ್ತಾನೇ ಇರ್ತಾರೆ...
ಆದರೆ ನಾವು ಈ ಕಪ್ಪೆಗಳ ತರಹ ಆಗೋದು ಬೇಡ. ಯಾವಾಗ ಹಾರಬೇಕು ಅನ್ನೋದು ನಮಗೆ ಗೊತ್ತಿರಬೇಕು! ಇನ್ನೂ ಹಾರಕ್ಕೆ ಶಕ್ತಿ ಇರುವಾಗಲೇ ಹಾರಿಬಿಡಬೇಕು.
ಒಳ್ಳೇದಾಗಲಿ!

Sunday, April 7, 2019

ಸಮಾಧಾನ ಸಿಕ್ತು

ರಾಬರ್ಟ್ ಡಿ ವೆನ್ಸೆಂಜೋ ಎಂಬ ಗಾಲ್ಫ್ ಆಟಗಾರನ ಬಗ್ಗೆ ಕೇಳಿರ ಬಹುದು. ಆತ ಮೂಲತಃ ಅರ್ಜೆಂಟೀನಾದವ. ಒಮ್ಮೆ ಟೂರ್ನ ಮೆಂಟ್ನಲ್ಲಿ ಗೆದ್ದ ವೆನ್ಸೆಂಜೋಗೆ ದೊಡ್ಡ ಮೊತ್ತದ ಚೆಕ್ ಸಿಕ್ಕಿತು. ಕ್ಯಾಮೆರಾಕ್ಕೆ ಪೋಸು ನೀಡಿ, ಅಭಿಮಾನಿಗಳಿಗೆಲ್ಲ ಹಸ್ತಾಕ್ಷರ ನೀಡಿ, ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ಹೆಂಗಸೊಬ್ಬಳು ಅವನ ಸನಿಹ ಬಂದು ಅವನ ಗೆಲುವಿಗೆ ಅಭಿನಂದಿಸಿದಳು. ಆನಂತರ ವೆನ್ಸೆಂಜೋನ ಕೈ ಹಿಡಿದುಕೊಂಡು, ‘ನನ್ನ ಮಗನ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿದ್ದಾನೆ. ಹಣ ಕೊಡದಿದ್ದರೆ ಅವನಿಗೆ ಚಿಕಿತ್ಸೆ ಕೊಡುವುದಿಲ್ಲ. ದಯವಿಟ್ಟು ಸಹಾಯ ಮಾಡಿ’ ಎಂದಳು.
ಅವಳ ಸ್ಥಿತಿ ಕಂಡು ವೆನ್ಸೆಂಜೋನ ಮನಕಲಕಿತು.
ತಕ್ಷಣ ಚೆಕ್ಬುಕ್ ಹಾಗೂ ಪೆನ್ ಹೊರತೆಗೆದ ಆತ ಟೂರ್ನ ಮೆಂಟ್ನಲ್ಲಿ ಗೆದ್ದ ಹಣವನ್ನೆಲ್ಲ ಆಕೆಗೆ ಬರೆದುಬಿಟ್ಟ. ‘ನಿನ್ನ ಮಗನಿಗೆ ಒಳ್ಳೆಯ ಚಿಕಿತ್ಸೆ ಕೊಡಿಸು. ಆತ ಬೇಗನೆ ಗುಣಮುಖನಾಗಲಿ’ ಎಂದು ಹೇಳಿ ಹೊರಟ.
ನಾಲ್ಕೈದು ತಿಂಗಳುಗಳ ಬಳಿಕ ವೆನ್ಸೆಂಜೋ ಗಾಲ್ಫ್ ಕ್ಲಬ್ಗೆ ಹೋದ. ಅಲ್ಲಿ ಅವನಿಗೆ ಹತ್ತಾರು ಮಂದಿ ಸ್ನೇಹಿತರು ಸಿಕ್ಕರು. ಆ ಪೈಕಿ ಒಬ್ಬಾತ, ‘ವೆನ್ಸೆಂಜೋ, ನಾಲ್ಕೈದು ತಿಂಗಳುಗಳ ಹಿಂದೆ, ನೀನು ಟೂರ್ನಮೆಂಟ್ ಗೆದ್ದ ದಿನ ಹೆಂಗಸೊಬ್ಬಳು ನಿನ್ನನ್ನು ಭೇಟಿ ಮಾಡಿ ದ್ದಳಂತೆ. ಆಸ್ಪತ್ರೆಯಲ್ಲಿರುವ ತನ್ನ ಮಗನಿಗೆ ಚಿಕಿತ್ಸೆಗೆ ಹಣ ಬೇಕೆಂದು ಕಣ್ಣೀರಿಟ್ಟಾಗ ನೀನು ಆಕೆಗೆ ಟೂರ್ನಿಯಲ್ಲಿ ಗೆದ್ದ ಹಣವನ್ನೆಲ್ಲ ನೀಡಿದೆಯಂತೆ ನಿಜಾನಾ?’ ಎಂದು ಕೇಳಿದ. ಅದಕ್ಕೆ ವೆನ್ಸೆಂಜೋ ಹೌದೆಂಬಂತೆ ತಲೆ ಅಲ್ಲಾಡಿಸಿದ.
‘ನಿಜಸಂಗತಿಯೇನೆಂದರೆ, ಆ ಹೆಂಗಸಿಗೆ ಮದುವೆಯೇ ಆಗಿಲ್ಲ ವಂತೆ. ಆಕೆಗೆ ಮಗನೂ ಇಲ್ವಂತೆ. ಆತನ ಸ್ಥಿತಿ ಗಂಭೀರವೂ ಆಗಿರಲಿ ಲ್ಲವಂತೆ’ ಎಂದು ಸ್ನೇಹಿತ ಜೋರಾಗಿ ನಕ್ಕ.
ಅದಕ್ಕೆ ವೆನ್ಸೆಂಜೋ ಹೇಳಿದ್ದೇನು ಗೊತ್ತಾ?
‘ಹಾಗಂದ್ರೆ ಮಗು ಸಾಯುತ್ತಿಲ್ಲ ಎಂದಂತಾಯಿತು. ಅದಕ್ಕಿಂತ ಸಂತಸದ ಸಂಗತಿ ಇನ್ನೇನಿದೆ? ಹಣ ಬರುತ್ತದೆ, ಹೋಗುತ್ತದೆ. ಆದರೆ ಮಗುವಿನ ಪ್ರಾಣ ಹೋದರೆ ಬರೊಲ್ಲ. ಪರವಾಗಿಲ್ಲ. ನನಗೆ ಸಮಾಧಾನ ಸಿಕ್ತು’

ಅಳುವಿಗೆ ಕಾರಣ

‘ಯಾಕೆ ಅಳ್ತಾ ಇದೀಯಾ ಅಮ್ಮ?’ ಎಂದು ಚಿಕ್ಕ ಹುಡುಗನೊಬ್ಬ ತನ್ನ ತಾಯಿಗೆ ಕೇಳಿದ. ‘ಯಾಕಂದ್ರೆ ನಾನು ಹೆಣ್ಣು’ ಎಂದುತ್ತರಿಸಿದಳು ಅವನ ತಾಯಿ.’ಅರ್ಥ ಆಗಲಿಲ್ಲ’ ಎಂದ ಆ ಹುಡುಗ. ಅವನನ್ನು ತಬ್ಬಿಕೊಂಡು ಮುತ್ತುಕೊಟ್ಟು ಅವನ ತಾಯಿ ಹೇಳಿದಳು, ‘ನಿನಗೆ ಎಂದಿಗೂ ಅರ್ಥ ಆಗುವುದಿಲ್ಲ!’

ನಂತರ ತಂದೆ ಬಳಿ ಓಡಿದ ಹುಡುಗ ‘ಅಪ್ಪ, ಕಾರಣವಿಲ್ಲದೆ ಹೆಂಗಸರು ಏಕೆ ಅಳುತ್ತಾರೆ?’ ಎಂದು ಕೇಳಿದ. ‘ಅಳುವುದಕ್ಕೆ ಅವರಿಗೆ ಕಾರಣ ಬೇಕಿಲ್ಲ’ ಎಂದು ಅವರಪ್ಪ ನಕ್ಕ!

ಕಾಲ ಸರಿಯಿತು. ಆ ಹುಡುಗ ಯುವಕನಾಗಿದ್ದ. ಆದರೂ ಹೆಂಗಸರೇಕೆ ಅಳುತ್ತಾರೆ ಎನ್ನುವ ಪ್ರಶ್ನೆಗೆ ಮಾತ್ರ ಆತನಿಗೆ ಉತ್ತರ ಸಿಕ್ಕಿರಲಿಲ್ಲ. ಕೊನೆಗೊಂದು ದಿನ ಈ ಪ್ರಶ್ನೆಗೆ ಉತ್ತರಿಸುವಂತೆ ದೇವರಿಗೆ ಮೊರೆಯಿಟ್ಟ! ಪ್ರತ್ಯಕ್ಷನಾದ ದೇವರು ಹೇಳಿದ-“ಮಗು… ನಾನು ಹೆಣ್ಣನ್ನು ಎಲ್ಲರಿಗಿಂತ, ಎಲ್ಲದಕ್ಕಿಂತ ಭಿನ್ನವಾಗಿ ಸೃಷ್ಟಿಸಿದೆ. ಹಾಗಾಗೇ ಪ್ರಪಂಚದ ಭಾರವನ್ನೆಲ್ಲ ಹೊರುವ ಶಕ್ತಿ ಆಕೆಯ ಗಟ್ಟಿ ಭುಜಗಳಿಗಿದೆ, ಜೊತೆಗೆ ಒಬ್ಬರಿಗೆ ಆಸರೆಯಾಗಬಲ್ಲಷ್ಟೂ ಅವು ಮೃದುವಾಗಿವೆ. ಮಕ್ಕಳನ್ನು ಹಡೆಯುವಾಗ ಆಗುವ ತೀವ್ರ ನೋವನ್ನು ಆಕೆ ಸಹಿಸಿಕೊಳ್ಳಬಲ್ಲಳು, ಜೊತೆಗೆ ತನ್ನ ಮಕ್ಕಳು ದೊಡ್ಡವರಾದ ಮೇಲೆ ಕೊಡುವ ನೋವನ್ನೂ ಕೂಡ. ಕುಟುಂಬದಲ್ಲಿ ಎಲ್ಲರೂ ಕೈಚೆಲ್ಲಿ ಕುಳಿತಾಗ ತಾನೊಬ್ಬಳೇ ಎದ್ದು ಎಲ್ಲರ ಸಹಾಯಕ್ಕೂ ಧಾವಿಸುವ ಶಕ್ತಿಯನ್ನು, ತನಗೆ ಸುಸ್ತಾದರೂ ಮನೆಯವರ ಶುಶ್ರೂಶೆ ಮಾಡುವ ದೊಡ್ಡ ಮನಸ್ಸನ್ನು ನಾನು ಆಕೆಗೆ ಕೊಟ್ಟಿದ್ದೇನೆ. ಮಕ್ಕಳು ಎಷ್ಟೇ ಹಿಂಸೆ ಕೊಟ್ಟರೂ ಅವರ ಮೇಲೆ ಆಕೆಗೆ ಎಂದಿಗೂ ಪ್ರೀತಿ ಕಡಿಮೆ ಆಗುವುದಿಲ್ಲ. ಪತಿ ಮಾಡಿದ ತಪ್ಪನ್ನೆಲ್ಲ ಕ್ಷಮಿಸುವ, ಕಷ್ಟಕಾಲದಲ್ಲಿ ಆತನಿಗೆ ಬೆನ್ನೆಲುಬಾಗಿ ನಿಲ್ಲುವ ಶಕ್ತಿ ಆಕೆಗಿದೆ.

ಕೊನೆಯದಾಗಿ ನಾನಾಕೆಗೆ ಕಣ್ಣೀರು ಹರಿಸುವ ಶಕ್ತಿಯನ್ನೂ ಕೊಟ್ಟೆ. ಭಾರ ಹೆಚ್ಚಾದಾಗ, ನೋವು ತೀವ್ರವಾದಾಗ, ಸಂತೋಷವಾದಾಗ ಆ ಭಾವನೆಗಳನ್ನೆಲ್ಲ ಕಣ್ಣೀರ ಮೂಲಕ ವ್ಯಕ್ತಪಡಿಸಲಿ ಎಂಬ ಕಾರಣಕ್ಕೆ.

ನೋಡು ಮಗು, ಹೆಣ್ಣಿನ ಸೌಂದರ್ಯ ಆಕೆಯ ಉಡುಗೆಯಲ್ಲಿಲ್ಲ. ಆಕೆಯ ದೇಹಸಿರಿಯಲ್ಲಿಲ್ಲ. ಆಕೆಯ ಕಣ್ಣಿನಲ್ಲಿದೆ. ಏಕೆಂದರೆ ಆಕೆಯ ಹೃದಯವೆಂಬ ಪ್ರೀತಿಯ ನೆಲೆಗೆ ಆಕೆಯ ಕಣ್ಣುಗಳೇ ಬಾಗಿಲು. ಹೆಣ್ಣನ್ನು ಅರ್ಥ ಮಾಡಿಕೊ, ಆಗ ಆಕೆಯ ಕಣ್ಣೀರು ಅರ್ಥವಾಗುತ್ತದೆ!” ದೇವರು ಮಾತು ಮುಗಿಸಿದ…

Friday, April 5, 2019

ಜೈ ಸಿಂಗ್ ಮತ್ತು ರೋಲ್ಸ್ ರಾಯ್ಸ್ ಕಾರು

ಒಮ್ಮೆ ರಾಜಸ್ಥಾನದ ರಾಜ "ಜೈ ಸಿಂಗ್ " ಲಂಡನ್ ಪ್ರವಾಸ ಕೈಗೊಂಡಿದ್ದರು ಅದೊಂದು ದಿನ ಜೈಸಿಂಗ್ ಲಂಡನ್ ನ "ಬಾಂಡ್ " ಬೀದಿಯಲ್ಲಿ ಸಾಮಾನ್ಯ ಪ್ರಜೆಯಂತೆ ನಡೆದುಬರುತ್ತಿದ್ದರು ಆಗ "ರೋಲ್ಸ್ ರಾಯ್ಸ್ "ಕಾರಿನ ಮಾರಾಟ ಮಳಿಗೆ ಅವರ ಕಣ್ಣಿಗೆ ಬಿತ್ತು.
ಅಂಗಡಿಯ ಒಳಗೆ ಬಂದ ಜೈಸಿಂಗ್ ಕಾರನ್ನು ಕೊಂಡುಕೊಳ್ಳುವ ಮನಸ್ಸಾಯಿತು.
ಅದರಂತೆ ಅಲ್ಲಿನ ಮಾಲೀಕನ ಬಳಿ ಕಾರಿನ ಬೆಲೆಯ ಬಗ್ಗೆ ವಿಚಾರಿಸಿದರು ಜೈಸಿಂಗ್ ಅವರ ಸಾಮಾನ್ಯ ವೇಷಭೂಷಣಗಳನ್ನು ನೋಡಿದ ಮಾಲೀಕ ಕಾರಿನ ಬಗ್ಗೆ ಸರಿಯಾದ ಮಾಹಿತಿ ನೀಡದೇ ಜೈಸಿಂಗ್ ಅವರಿಗೆ ಸರಿಯಾದ ಮಾಹಿತಿ ನೀಡದೆ ಉಡಾಫೆ ಮಾತುಗಳನ್ನಾಡಿ ಅವರನ್ನು ತುಚ್ಚವಾಗಿ ಕಂಡನು.
ಇದರಿಂದ ಅವಮಾನಿತರಾದ ಜೈಸಿಂಗ್ ನೇರವಾಗಿ ತಾವು ಉಳಿದುಕೊಂಡಿದ್ದ ಹೋಟೆಲ್ ಗೆ ಹೋದವರೇ ತಮ್ಮ ಸೇವಕರಿಗೆ ತಾವು ಕಾರಿನ ಮಳಿಗೆಗೆ ಹೋಗಬೇಕೆಂದು ಆಜ್ಞೆ ಮಾಡಿದರು.
ಕಾರಿನ ಮಳಿಗೆವರೆಗೆ ರತ್ನಗಂಬಳಿಯ ಹಾಸು ಉರುಳಿತು ರಾಜ ಜೈಸಿಂಗ್ ರಾಜಪೋಷಾಕಿನಲ್ಲಿ ಕಾರಿನ ಮಳಿಗೆಗೆ ಆಗಮಿಸಿದರು ಇದನ್ನು ಕಂಡ ಮಾಲೀಕ ಕಕ್ಕಾಬಿಕ್ಕಿಯಾದನು ಸ್ವಲ್ಪ ಹೊತ್ತಿನ ಮುಂಚೆ ಇಲ್ಲಿಗೆ ಬಂದಿದ್ದ ಸಾಮಾನ್ಯ ವ್ಯಕ್ತಿ ಇವರೇನಾ...?.ಎಂದು ಆಶ್ಚರ್ಯವಾಯಿತು.
ರಾಜ ಜೈಸಿಂಗ್ ಕೂಡಲೇ ಅಂಗಡಿಯಲ್ಲಿದ್ದ ಒಟ್ಟು 6 ಕಾರುಗಳನ್ನು ಖರೀದಿಸಿ ಸಾಗಣೆ ವೆಚ್ಚವನ್ನೂ ತಾವೇ ಪಾವತಿ ಮಾಡಿ ಭಾರತಕ್ಕೆ ತಂದರು.ಅಷ್ಟಕ್ಕೇ ಸುಮ್ಮನಾಗದ ಜೈಸಿಂಗ್ 6 ಐಷಾರಾಮಿ ಕಾರುಗಳನ್ನೂ ನಗರದ ಬೀದಿಗಳ ಕಸ ತುಂಬಿ ಸಾಗಿಸಲು ಬಳಸುವಂತೆ ತಮ್ಮ ರಾಜ್ಯದ ನಗರಪಾಲಿಕೆಗೆ ಆಜ್ಞೆ ಮಾಡಿದರು.ಅದರಂತೆ ರೋಲ್ಸ್ ರಾಯ್ಸ್ ಕಾರುಗಳು ಕಸದ ವಾಹನಗಳಾದವು.
ದಿನಕಳೆದಂತೆ ಈ ಸುದ್ದಿ ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿತು "ರೋಲ್ಸ್ ರಾಯ್ಸ್" ಕಂಪನಿಯ ಪ್ರತಿಷ್ಠೆ.ಬೇಡಿಕೆ ದಿನಕಳೆದಂತೆ ಕುಸಿಯತೊಡಗಿತು.ಇದ
ರಿಂದ ಕಂಗೆಟ್ಟ ಕಂಪನಿ ರಾಜ ಜೈಸಿಂಗ್ ರಿಂದ ವಿವರಣೆ ಕೇಳಿತು ಜೈಸಿಂಗ್ ಲಂಡನ್ನಿನ ಷೋರೋಮಿನಲ್ಲಿ ತಮಗಾದ ಅವಮಾನವನ್ನು ವಿವರಿಸಿದರು.
ಕೂಡಲೇ ಕಂಪನಿಯು ತಮ್ಮಿಂದಾದ ಪ್ರಮಾದಕ್ಕೆ ರಾಜ ಜೈಸಿಂಗ್ ರಲ್ಲಿ ಕ್ಷಮೆಕೇಳಿತು ಅಷ್ಟಲ್ಲದೇ ಮತ್ತೆ 6 ಹೊಸ ಕಾರುಗಳನ್ನು ಉಚಿತವಾಗಿ ನೀಡುತ್ತೇವೆ ಕಾರಿನಲ್ಲಿ ಕಸ ಸಾಗಾಣಿಕೆಗೆ ಮಾಡುವುದನ್ನು ದಯವಿಟ್ಟು ಕೂಡಲೇ ನಿಲ್ಲಿಸಿ ಎಂದು ಬೇಡಿಕೊಂಡಿತು.ರಾಜ ಜೈಸಿಂಗ್ ಕಂಪನಿಯ ಕೋರಿಕೆಯನ್ನು ಮನ್ನಿಸಿ ಕಸ ಸಾಗಾಟವನ್ನು ನಿಲ್ಲಿಸಿ 6 ಹೊಸ ಕಾರುಗಳನ್ನು ಉಚಿತವಾಗಿ ಪಡೆದರು.
ಆ ಮೂಲಕ ಒಬ್ಬ ಭಾರತೀಯನಿಗೆ ಬ್ರಿಟಿಷ್ ಕಂಪನಿ "ರೋಲ್ಸ್ ರಾಯ್ಸ್" ನಿಂದ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಂಡರು.
ಸ್ವಾಭಿಮಾನಿ ಭಾರತೀಯರಿಗೆ ಮಾದರಿಯಾದರು.
This is the power of Bharatiyas!

Tuesday, April 2, 2019

ಅಧ್ಭುತವಾದ ಪೇಂಟಿಂಗ್

ಒಮ್ಮೆ ಒಬ್ಬಾತ 3 ದಿನಗಳ ಕಾಲ ಕಷ್ಟಪಟ್ಟು
ಒಂದು ಅಧ್ಭುತವಾದ ಪೇಂಟಿಂಗ್ ಅನ್ನು
ರಚಿಸಿದ.ಆ ಪೇಂಟಿಂಗ್ ಹೇಗಿದೆ ಎಂದು ಜನಗಳ
ಅಭಿಪ್ರಾಯ ತಿಳಿಯ ಬೇಕೆಂದು ಆಸೆಪಟ್ಪ.
ನಾಲ್ಕು ರಸ್ತೆ ಸೇರುವ ವೃತ್ತದಲ್ಲಿ ಅದನ್ನು
ಪ್ರದರ್ಶನ ಮಾಡಿದ. ಅದರ ಕೆಳಗೆ ಹೀಗೊಂದು
ಸಾಲನ್ನು ಬರೆದಿದ್ದ "ನಾನು ಮೊದಲ ಬಾರಿ ಬರೆದ
ಪೇಂಟಿಂಗ್ ಇದು. ಇದರಲ್ಲಿ ಲೋಪಗಳು ನಿಮಗೆ
ಕಾಣಿಸಬಹುದು. ಎಲ್ಲಿ ಲೋಪ ಕಾಣುತ್ತದೆಯೊ
ಅಲ್ಲಿ ಒಂದು × ಚಿನ್ಹೆ ಬರೆಯಿರಿ "ಎಂದು
ಅದರಲ್ಲಿತ್ತು .
.
.
ಸಂಜೆಯ ಹೊತ್ತಿಗೆ ಆ ಚಿತ್ರಕಾರ ಪುನಃ ಬಂದು
ಚಿತ್ರವನ್ನು ನೋಡಿದ. ಆತನಿಗೆ ಒಮ್ಮೆಲೇ ಅಳು
ಬಂದಿತು. ಕಾರಣ ಏನಂದರೆ ಆ ಚಿತ್ರದ ತುಂಬಾ ×
ಚಿನ್ಹೆಗಳೇ ತುಂಬಿ ಹೋಗಿತ್ತು.
.
ಚಿತ್ರಕಾರ ಅಳುತ್ತಾ ತನಗೆ ಚಿತ್ರಕಲೆ ಹೇಳಿಕೊಟ್ಟ
ಗುರುವಿನ ಬಳಿಗೆ ಬಂದು ಈ ರೀತಿ ಹೇಳಿದ
"ನಾನು ಪೇಂಟಿಂಗ್ ಮಾಡಲು ಸಾಧ್ಯವಿಲ್ಲ
ಎಂದು ಈ ದಿನ ನನಗೆ ತಿಳಿಯಿತು "ಎಂದು
ವಿಷಾದಿಸಿದ. ಗುರುಗಳು ಆತನಿಗೆ ಸಮಾಧಾನ ಮಾಡಿ
ಮತ್ತೆ ಆದೇ ಪೇಂಟಿಂಗ್ ಅನ್ನು ಪುನಃ ರಚನೆ
ಮಾಡು ಎಂದು ಹೇಳಿದರು. ಮತ್ತೊಮ್ಮೆ ಆ
ಪೇಂಟಿಂಗ್ ಬರೆದು ತಂದ ಈ ಬಾರಿ ಕೂಡ ಅದೇ
ಸ್ಥಳದಲ್ಲಿ ಇಟ್ಟು ಕೆಳಗೆ ಹೀಗೆ ಬರೆಸಿದರು
ಗುರುಗಳು " ನಾನು ಬರೆದ ಮೊದಲ
ಪೇಂಟಿಂಗ್ ಇದು. ಇದರಲ್ಲಿ ನಿಮಗೆ ಲೋಪಗಳು
ಕಾಣಿಸಬಹುದು . ಎಲ್ಲಿ ಲೋಪ ಕಾಣುತ್ತದೆಯೊ
ಅಲ್ಲಿ ಕೆಳಗೆ ಇಟ್ಟಿರುವ ಕುಂಚ ಹಾಗೂ
ವರ್ಣಗಳನ್ನು ಉಪಯೋಗಿಸಿ ಸರಿ ಮಾಡಿ "ಎಂದು
ಇತ್ತು.
.
ಒಂದು ವಾರ ಕಾಲ ಕಳೆದರು ಒಬ್ಬರಾದರು
ಅದರಲ್ಲಿರುವ ಲೋಪಗಳನ್ನು ಸರಿಪಡಿಸಲಿಲ್ಲ.
.
ಹೀಗೆಕೆ ಆಯಿತು?
ಎದುರಿನಲ್ಲಿರುವ ವ್ಯಕ್ತಿಯ ಕುರಿತು ವಿಮರ್ಶೆ
ಮಾಡುವುದು ಬಹಳ ಸುಲಭ
ಸರಿ ತಿದ್ದುವುದು ಬಹಳ ಕಷ್ಟ.
ಸಮಾಜದಲ್ಲಿ ತಪ್ಪು ಹುಡುಕುವುದು ಸುಲಭ.
ಸರಿಪಡಿಸುವುದು ಕಷ್ಟ.